ಮುಲ್ಕಿ, ಕಡಬ ತಾಲೂಕಿಗೆ ಅಗ್ನಿಶಾಮಕ ಠಾಣೆ ಶೀಘ್ರದಲ್ಲಿ ಕಾಮಗಾರಿ: ಗೃಹ ಸಚಿವ ಡಾ. ಜಿ. ಪರಮೇಶ್ವರ
ಮಂಗಳೂರು: ಮುಲ್ಕಿ ಮತ್ತು ಕಡಬ ತಾಲೂಕಿಗೆ ಅಗ್ನಿಶಾಮಕ ಠಾಣೆಯನ್ನು ಮಂಜೂರುಗೊಳಿಸಿದ್ದು, ಶೀಘ್ರದಲ್ಲಿ ಇದಕ್ಕೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
ಅಗ್ನಿಶಾಮಕ ಇಲಾಖೆಗೆ ತುರ್ತು ಸಂದರ್ಭ ನಿರ್ವಹಣೆಗೆ ರೂ. 50 ಕೋಟಿ ವೆಚ್ಚದಲ್ಲಿ ಹೊಸ ವಾಹನಗಳ ಖರೀದಿಗೆ ಮಂಜೂರಾತಿ ನೀಡಲಾಗಿದೆ. 15 ವರ್ಷ ದಾಟಿದ ವಾಹನಗಳನ್ನು ಬಳಸುವಂತಿಲ್ಲ ಎಂಬ ನಿಯಮದಿಂದ ಅಗ್ನಿಶಾಮಕ ಇಲಾಖೆಯ ಹಲವು ವಾಹನಗಳು ನಿರುಪಯುಕ್ತವಾಗಿತ್ತು. ಇದರಿಂದ ಹೊಸ ವಾಹನಗಳ ಖರೀದಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಇಲಾಖೆಗೆ ಹೊಸ ಅಗ್ನಿಶಾಮಕ ವಾಹನಗಳ ಖರೀದಿಗೆ ರೂ. 50 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇಲಾಖೆಗೆ ಅತೀ ಉದ್ದದ 90 ಮೀ. ಎತ್ತರದ ಏಣಿಯನ್ನು ಖರೀದಿಸಲಾಗಿದೆ. ಇದರಿಂದ ಎತ್ತರದ ಕಟ್ಟಡಗಳಲ್ಲಿ ಉಂಟಾಗುವ ದುರಂತಗಳ ಸ್ಥಳಗಳಿಗೆ ತುರ್ತಾಗಿ ತಲುಪಬಹುದಾಗಿದೆ. ಇದಲ್ಲದೆ ಆಧುನೀಕರಣ ಅಭಿವೃದ್ಧಿಯಿಂದ ಎದುರಾಗುವ ದುರಂತಗಳ ನಿರ್ವಹಣೆಗೆ ಸುಲಭವಾಗಬಹುದು ಎಂದು ಹೇಳಿದರು. ಮಂಗಳೂರು ವಿಭಾಗದಲ್ಲಿ ಪೆಟ್ರೋಲಿಯಂ ಮತ್ತು ತೈಲ ಕಂಪನಿಗಳು, ರಾಸಾಯನಿಕ ಕೈಗಾರಿಕೆಗಳು ಮತ್ತು ಬಂದರು ಇರುವುದರಿಂದ ಇದಕ್ಕೆ ಸಂಬಂಧಿತ ದುರಂತಗಳ ನಿರ್ವಹಣೆಗಾಗಿ ಅಗ್ನಿಶಾಮಕ ಇಲಾಖೆಯನ್ನು ಸಶಕ್ತಗೊಳಿಸಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು. ಜಿಲ್ಲೆಯಲ್ಲಿ ಇತ್ತೀಚೆಗೆ ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳು ಹಲವೆಡೆ ಸಂಭವಿಸಿದ್ದು ಇದನ್ನು ನಿರ್ವಹಿಸಲು ಅಗ್ನಿಶಾಮಕ ಇಲಾಖೆಯನ್ನು ಪರಿಣಾಮಕಾರಿಯಾಗಿ ಸಜ್ಜುಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕಾಮೆಂಟ್ ಬಿಡಿ