ರಾಜ್ಯ ಸುದ್ದಿ

ಮಂಗಳೂರು ವಿವಿಧ ಪ್ರದೇಶಗಳು ಜಲಾವೃತ; ಅಬ್ಬರದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಮಂಗಳೂರು: ಕಳೆದೆರಡು ದಿನಗಳಿಂದ ಸ್ವಲ್ಪ ತಗ್ಗಿದ್ದ ಮಳೆ ಭಾನುವಾರ ಮತ್ತೆ ಅಬ್ಬರಿಸಿದೆ. ನಿರಂತರವಾಗಿ ಸುರಿದ ಪರಿಣಾಮ ಮಂಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ಕೃತಕ ನೆರೆಯಾಗಿದ್ದು, ವಿವಿಧ ಪ್ರದೇಶಗಳು ಜಲಾವೃತಗೊಂಡಿದೆ. ಮನೆಗಳಿಗೆ ನೀರು ನುಗ್ಗಿದೆ.

ಇಂದು ಬೆಳಿಗ್ಗೆ ರವಿವಾರ ರಜೆಯೂ ಇದ್ದುದರಿಂದ ಮಂಗಳೂರು ನಗರದೆಲ್ಲೆಡೆ ವಾಹನ ಸಂಚಾರ, ಜನಸಂಚಾರ ಹೆಚ್ಚಿತ್ತು. ಅಬ್ಬರದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಮಂಗಳೂರಿನ ಪಂಪ್‌ವೆಲ್ ವೃತ್ತ, ಪಡೀಲ್ ರೈಲ್ವೇ ಕೆಳ ಸೇತುವೆ ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪಂಪ್‌ವೆಲ್ ವೃತ್ತ ಜಲಾವೃತಗೊಂಡಿರುವ ಕಾರಣ ಸುತ್ತಮುತ್ತಲಿನ ಎಲ್ಲಾ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಕಳೆದ ಸುಮಾರು ಒಂದು ತಾಸಿನಿಂದ ಈ ರಸ್ತೆಗಳಲ್ಲಿ ವಾಹನಗಳ ಸರಾಗ ಸಂಚಾರಕ್ಕೆ ಸಾಧ್ಯವಾಗದೆ ವಾಹನ ದಟ್ಟಣೆ ಉಂಟಾಗಿದೆ.

ಈ ನಡುವೆ ಎಕ್ಕೂರು, ಜಪ್ಪಿನಮೊಗರುವಿನ ರಾಜಕಾಲುವೆಯೂ ತುಂಬಿ ಹರಿಯುತ್ತಿದ್ದು, ಸುತ್ತಮುತ್ತಲಿನ ಮನೆಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಭಾರೀ ಮಳೆಯಿಂದಾಗಿ ರಸ್ತೆಗಳಲ್ಲೇ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಮಂಗಳೂರಿನ ಕೊಟ್ಟಾರ, ರಥಬೀದಿ, ಕೊಡಿಯಾಲಬೈಲ್, ಎಂ. ಜಿ. ರಸ್ತೆ ಸೇರಿದಂತೆ ವಿವಿಧ ಪ್ರಮುಖ ರಸ್ತೆಗಳಲ್ಲಿ ನೆರೆಯಾಗಿದ್ದು ವಾಹನ ಸಂಚಾರವೇ ದುಸ್ತರವಾಗಿತ್ತು.

ಮಂಗಳೂರಿನಲ್ಲಿ ಶನಿವಾರ ಸುರಿದ ಭಾರೀ ಮಳೆಯಿಂದಾಗಿ ವಾಮಂಜೂರಿನ ಹೊರವಲಯದ ಕೆತ್ತಿಕಲ್‌ನಲ್ಲಿ  ಭೂಕುಸಿತ ಸಂಭವಿಸಿದ್ದು, ಮಂಗಳೂರು, ಮೂಡುಬಿದಿರೆ ಮತ್ತು ಕಾರ್ಕಳವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಳಿತ್ತನೂಜಿ ವಾರ್ಡಿನ ಸರವು ಸಂಪರ್ಕಿಸುವ ಕಾಲುದಾರಿ ಕಲ್ಲಮರೆಯಿ ಎಂಬಲ್ಲಿ ಕಾಲುದಾರಿ ಸಂಪೂರ್ಣವಾಗಿ ಜರಿದು ಕಾಲುದಾರಿ ಇಲ್ಲದಾಗಿ ಸಂಪರ್ಕ ಕಡಿದು ಹೋಗಿದೆ.

ಸೂರಿಕುಮೇರು ಸಮೀಪದ ಬಾಳ್ತಿಲ ಎಂಬಲ್ಲಿ ಇಂದು ಬೆಳಿಗ್ಗೆ ಮತ್ತೆ ಎರಡು ವಾಣಿಜ್ಯ ಸಂಕೀರ್ಣಗಳು ಜಲಾವೃತಗೊಂಡಿದ್ದು, ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದೆ. ಕೆ.ಎನ್.ಆರ್.ಸಿ.ಕಂಪೆನಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಮಾಡಿದ ಅವಾಂತರವೇ ಕಟ್ಟಡಗಳು ಜಲಾವೃತಗೊಳ್ಳಲು ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುರತ್ಕಲ್-ನಂತೂರು ಜಂಕ್ಷನ್ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ ವಾಹನಗಳ ವೇಗದ ಮಿತಿಯನ್ನು ಗಂಟೆಗೆ 50 ಕಿ.ಮೀ.ಗೆ ನಿಗದಿಪಡಿಸಲಾಗಿದೆ.

ನಿರಂತರ ಮಳೆಯಿಂದಾಗಿ ಹೆದ್ದಾರಿಯ ಹಲವಾರು ಭಾಗಗಳು ಹಾನಿಗೊಳಗಾಗಿರುವುದರಿಂದ ವಾಹನಗಳ ಅತಿ ವೇಗದ ಚಾಲನೆಗೆ ರಸ್ತೆಯು ಅಸುರಕ್ಷಿತವಾಗಿದೆ. ಹೆದ್ದಾರಿ ಬಳಕೆದಾರರ ಸುರಕ್ಷತೆಯನ್ನು ಪರಿಗಣಿಸಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ರಾಷ್ಟ್ರೀಯ ಹೆದ್ದಾರಿ (ಭೂಮಿ ಮತ್ತು ಸಂಚಾರ) ಕಾಯಿದೆ, 2002 ರ ಅಡಿಯಲ್ಲಿ ಇರುವ ಅಧಿಕಾರವನ್ನು ಬಳಸಿಕೊಂಡು ವೇಗ ನಿಯಂತ್ರಣವನ್ನು ಜಾರಿಗೊಳಿಸಿದೆ.

ಕಾಮೆಂಟ್ ಬಿಡಿ

Join Us