ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತದ ಸದ್ದು ಜೋರಾಗಿದ್ದು, ದೊಡ್ಡ ದೊಡ್ಡ ಬಿಜೆಪಿ ನಾಯಕರೇ ಕಾಂಗ್ರೆಸ್ ಗೆ ಬರಲಿದ್ದಾರೆ ಎಂದು ಆಪರೇಷನ್ ಹಸ್ತದ ಕುರಿತು ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹಲವಾರು ಮಂದಿ ಬಿಜೆಪಿ ನಾಯಕರು ನನ್ನ ಜೊತೆ ಮತ್ತು ಸತೀಶ್ ಜಾರಕಿಹೊಳಿ ಜೊತೆಗೂ ಸಂಪರ್ಕದಲ್ಲಿದ್ದಾರೆ. ಆಪರೇಷನ್ ಹಸ್ತ ನಾವು ಮಾಡ್ತಾ ಇಲ್ಲ. ಆಪರೇಷನ್ ಕಮಲ ವಿರೋಧಿಸಿದವರು ನಾವು. ಅವರಾಗಿಯೇ ಬರ್ತೀವಿ ಅಂದ್ರೆ ಬೇಡ ಅನ್ನೋಕಾಗತ್ತಾ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಈಗ ಮುಳುಗುತ್ತಿರುವ ಹಡಗಲ್ಲ, ಮುಳುಗಿ ಹೋಗಿರುವ ಹಡಗು. ಯಾರೂ ಕೂಡ ಈಗ ಬಿಜೆಪಿಯಲ್ಲಿ ಇರಲು ಇಷ್ಟಪಡುವುದಿಲ್ಲ, ಬಿಜೆಪಿಯ ನಾಯಕರ ಮೇಲೆ ವರಿಷ್ಟರ ವಕ್ರ ದೃಷ್ಟಿ ಬಿದ್ದಿದೆ ಮೋದಿಯವರು ಮೊನ್ನೆ ಇವರ ಮುಖ ಕೂಡ ನೋಡಲಿಲ್ಲ. ಮರ್ಯಾದೆ ಉಳಿಸಿಕೊಳ್ಳುವುದಕ್ಕೆ ಬ್ಯಾರಿಕೇಡ್ ಹಿಂದೆ ಇವರೇ ಹೋಗಿ ನಿಂತಿದ್ರು. ಹಲವಾರು ಮಂದಿ ಬಿಜೆಪಿ ನಾಯಕರು ನನ್ನ ಜೊತೆ ಗೂ, ಜಾರಕಿಹೊಳಿ ಜೊತೆಗೂ ಸಂಪರ್ಕದಲ್ಲಿದ್ದಾರೆ. ಬಹಳ ದೊಡ್ಡ ದೊಡ್ಡ ಬಿಜೆಪಿ ನಾಯಕರೇ ಕಾಂಗ್ರೆಸ್ ಗೆ ಬರಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ಇನ್ನೂ ಕೇವಲ ಸಣ್ಣಪುಟ್ಟ ಅಲ್ಲ. ಆಪರೇಷನ್ ಹಸ್ತ ನಾವು ಮಾಡ್ತಾ ಇಲ್ಲ, ಆಪರೇಷನ್ ಕಮಲ ವಿರೋಧಿಸಿದವರು ನಾವು. ಅವರಾಗಿಯೇ ಬರ್ತೀವಿ ಅಂದ್ರೆ ಬೇಡ ಅನ್ನೋಕಾಗತ್ತಾ? ನಮ್ಮವರನ್ನು ಡಿಸ್ಟರ್ಬ್ ಮಾಡದೆಯೇ ನಾವು ಪಕ್ಷ ಸೇರ್ಪಡೆ ಮಾಡಿಕೊಳ್ತೇವೆ. ನಮ್ಮವರ ಹಿತಾಸಕ್ತಿ ಕಾಪಾಡಿಕೊಂಡೇ ಎಲ್ಲ ಕೆಲಸ ಮಾಡುತ್ತೇವೆ ಎಂದು ಹೇಳಿದರು. ತನಿಖಾ ಆಯೋಗಳ ಮೂಲಕ ಬಿಜೆಪಿ ನಾಯಕರ ಟಾರ್ಗೆಟ್ ಎಂಬ ಸುಧಾಕರ್ ಆರೋಪ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಸಿದ ಅವರು, ನೀವು ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಹೆದರುತ್ತೀರಾ? ತಪ್ಪು ಮಾಡಿದವರು ಹೆದರಬೇಕು. ತಪ್ಪು ಮಾಡಿದವರನ್ನು ಟಾರ್ಗೆಟ್ ಮಾಡ್ತಾರೆ ಅಂದ್ರೆ ಒಪ್ಪಿಕೊಳ್ಳಬೇಕು, ತಪ್ಪು ಮಾಡಿಲ್ಲ ಅಂದರೆ ಟಾರ್ಗೆಟ್ ಮಾಡಿದಂತೆ ಹೇಗಾಗುತ್ತದೆ? ಎಂದು ಪ್ರಶ್ನಿಸಿದರು.