ದಕ್ಷಿಣ ಕನ್ನಡ: ತುಳು ನಾಡಿನ ಸಾಂಪ್ರದಾಯಿಕ ಕ್ರೀಡೆ ಹಾಗು ಸಂಸ್ಕೃತಿಯ ಭಾಗವಾದ ಕಂಬಳದ ಮೇಲು ಕೊರೋನ ಎಫೆಕ್ಟ್ ತಟ್ಟಿದ್ದು...ಈ ಬಾರಿ ತುಳುನಾಡಿನಲ್ಲಿ ಕಂಬಳ ನಡೆಯುತ್ತೋ ಇಲ್ಲವೋ ಎಂಬ ಅನುಮಾನ ಕಂಬಳ ಪ್ರಿಯರನ್ನು ಹಾಗು ತುಳುವರನ್ನು ಕಾಡಲಾರಂಭಿಸಿದೆ.

ಈ ಬಗ್ಗೆ, ಕಂಬಳ ಸ್ಪರ್ಧೆಗಳನ್ನು ಆಯೋಜಿಸುವ ಸಮಿತಿ, ನಾವು ಕೊರೋನ ನಿಯಮಗಳನ್ನು ಪಾಲಿಸಿಕೊಂಡು ಕಂಬಳ ನಡೆಸಲು ಸಿದ್ಧರಿದ್ದು...ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಸದ್ಯ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವಕಾಶಗಳನ್ನು ನೀಡಲಾಗುತ್ತಿಲ್ಲ. ಅದಾಗ್ಯೂ ಕೆಲವೊಂದು ಸಭೆ-ಸಮಾರಂಭಗಳಿಗೆ ಅವಕಾಶ ನೀಡಿದರೂ 150 ಜನರಿಗೆ ಮಾತ್ರ ಸೀಮಿತ ಎನ್ನುವ ನಿಯಮ ಹೇರಲಾಗುತ್ತದೆ. ಹೀಗಿರುವಾಗ ಕಂಬಳಕ್ಕೆ ಅವಕಾಶ ನೀಡಿದರೆ, ಪ್ರೇಕ್ಷಕರು, ಅಭಿಮಾನಿಗಳು, ಕಂಬಳ ಕೋಣಗಳ ಜೊತೆ ಆಗಮಿಸುವವರೆಲ್ಲ ಸೇರಿ ಸಾವಿರಾರು ಜನರು ಒಂದೆಡೆ ಸೇರುವ ಸಾಧ್ಯತೆಯಿರುವ ಕಾರಣ ಕಂಬಳಕ್ಕೆ ಅನುಮತಿ ನೀಡುವುದು ಕಷ್ಟ ಎಂದು ಜಿಲ್ಲಾಡಳಿತ ಹೇಳಿದೆ.

ಅಲ್ಲದೆ, ನ.ವರೆಗೆ ಕೇಂದ್ರ ಸರ್ಕಾರದ ನಿರ್ಬಂಧ ಇರುವುದರಿಂದ ಮುಂದಿನ ಆದೇಶದ ಬಗ್ಗೆ ಜಿಲ್ಲಾಡಳಿತ ಎದುರು ನೋಡುತ್ತಿದ್ದು, ಡಿಸೆಂಬರರ್ನಲ್ಲಿ ಕೇಂದ್ರ ಸರ್ಕಾರ ನಿರ್ಬಂಧ ಸಡಿಲಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ನಡುವೆ ಕಂಬಳ ಆಯೋಜನೆಯ ಸಮಿತಿಯವರು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಕಂಬಳಕ್ಕೆ ಅವಕಾಶ ನೀಡುವಂತೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಅಂತಿಮವಾಗಿ ಹೊಸ ವರ್ಷದ ಆರಂಭಕ್ಕೆ ಕಂಬಳ ಆಯೋಜನೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗುವ ನಿರೀಕ್ಷೆಯಿದೆ.
- ನ್ಯೂಸ್ ಬ್ಯೂರೋ, ಟ್ರೂನ್ಯೂಸ್ ಕನ್ನಡ